ಜೀವನದಲ್ಲಿ ಪ್ರತಿಯೊಂದು ಸಂಬಂಧಗಳಿಗೂ ತನ್ನದೇ ಆದ ಮೌಲ್ಯವಿರುತ್ತದೆ. ಆದರೆ ಕೆಲವರು ಅದನ್ನು ಮೀರಿ ನಡೆದುಕೊಂಡು ಅಪಮೌಲ್ಯ ಮಾಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ತಂದೆ ಮಗಳ ಬಾಂಧವ್ಯ ತುಂಬಾ ಪವಿತ್ರವಾದುದು. ಅದಕ್ಕೆ ಚ್ಯುತಿ ಬಂದಾಗ ಮಕ್ಕಳ ಮೇಲೆ ಯಾವರೀತಿಯ ಪರಿಣಾಮ ಬೀರಯತ್ತದೆ ಎಂಬುದನ್ನು ನಿರ್ದೇಶಕ ಪ್ರವೀಣ್ ಒಂದೊಳ್ಳೆ ಲವ್ ಸ್ಟೋರಿ ಚಿತ್ರದ ಮೂಲಕ ಹೇಳಿದ್ದಾರೆ. ಬಿಳೀಗೋಡೆಯ ಮೇಲಿರುವ ಕಪ್ಪುಚುಕ್ಕೆಯ ಹಾಗೆ ಸಮಾಜದಲ್ಲಿ ಇಂಥವರು ಕಾಣಸಿಗುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಈ ಥರದ ಕಂಟೆಂಟ್ ಇಟ್ಟುಕೊಂಡು ಯಾರೂ ಸಿನಿಮಾ ಮಾಡಿಲ್ಲ.
ಒಂದೊಳ್ಳೇ ಲವ್ಸ್ಟೋರಿ ಮೂಲಕ ತೆರೆಮೇಲೆ ಯಾರೂ ಹೇಳಿದರ ವಿಷಯವನ್ನು ಅನಿ(ಅಶ್ವಿನ್) ಹಾಗೂ ಜೆಸ್ಸಿ(ಧನುಶ್ರೀ) ಪಾತ್ರಗಳ ಮೂಲಕ ನಿರ್ದೇಶಕ ಪ್ರವೀಣ್ ಹೇಳಲು ಪ್ರಯತ್ನಿಸಿದ್ದಾರೆ. ಪ್ರೀತಿಸಿದ ಹುಡುಗಿಯ ನಂಬಿಕೆ ದ್ರೋಹದಿಂದ ಬೇಸತ್ತು ಕುಡಿತಕ್ಕೆ ದಾಸನಾಗುವ ಅನಿಗೆ ಗೆಳೆಯ ಕಾರಂತ್ ಹಾಗೂ ಕಾವ್ಯ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾರೆ. ಇನ್ನೊಂದೆಡೆ ಜೆಸ್ಸಿ ಎಂಬ ಯುವತಿ ಚಿಕ್ಕವಳಿದ್ದಾಗಿನಿಂದಲೂ ಸಾಕುತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಜೀವನದಲ್ಲಿ ಬೇಸತ್ತು ಕಾವ್ಯ ಇದ್ದ ಪಿಜಿಯಲ್ಲಿ ವಾಸಿಸುತ್ತಿರುತ್ತಾಳೆ. ಸದಾ ದುಖದಲ್ಲಿ ಮುಳುಗಿ ನೋವನ್ನು ಮರೆಯಲು ಡ್ರಿಂಕ್ಸ್ ಹವ್ಯಾಸ ಬೆಳೆಸಿಕೊಂಡಿರಯತ್ತಾಳೆ. ನಂತರ ಕಾವ್ಯಳ ಮೂಲಕ ಅನಿಗೆ ಜೆಸ್ಸಿಯ ಪರಿಚಯವಾಗುತ್ತದೆ. ಒಮ್ಮೆ ಎಲ್ಲರೂ ಸೇರಿ ಲಾಂಗ್ಡ್ರೈವ್ ಹೋಗಲು ನಿರ್ಧರಿಸುತ್ತಾರೆ.
ಕೊನೇಸಮಯದಲ್ಲಿ ಕಾವ್ಯ ಹೊರಡೋದು ಕ್ಯಾನ್ಸೆಲ್ ಆಗಿ ಅನಿ, ಕಾರಂತ್ ಹಾಗೂ ಜೆಸ್ಸಿ ಈ ಮೂವರೇ ಹೊರಡುತ್ತಾರೆ. ಮಾರ್ಗದಲ್ಲಿ ಅನಿ ತನಗೆ ಮೋಸಮಾಡಿದ ಹುಡುಗಿಯ ಬಗ್ಗೆ ಹೇಳಿಕೊಳ್ಳುತ್ತಾನೆ. ಆದರೆ ಜೆಸಿ ತನ್ನ ಯಾವುದೇ ವಿಚಾರ ಹೇಳದೆ ಕಣ್ಣೀರಿನಲ್ಲೇ ಉತ್ತರಿಸುತ್ತಾಳೆ. ಈ ನಡುವೆ ಅನಿ ಗೆಳೆಯ ಕಾರಂತ್ ಜೆಸ್ಸಿಯ ಸೌಂದರ್ಯಕ್ಕೆ ಮಾರುಹೋಗಿ ಆಕೆಯನ್ನು ಅನುವಿಸಬೇಕೆಂಬ ದುರಾಲೋಚನೆಯಿಂದ ಡ್ರಿಂಕ್ಸ್ ನಲ್ಲಿ ಮಾದಕದ್ರವ್ಯ ಸೇರಿಸಿ ಕೊಡುತ್ತಾನೆ. ಅನಿಗೆ ಇದು ಗೊತ್ತಾಗಿ ಕಾರಂತನಿಂದ ಆಕೆಯನ್ನು ರಕ್ಷಿಸಿ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಮಾರ್ಗಮಧ್ಯೆ ಎದುರಾಗುವ ಮಹಿಳೆ ಜಸ್ಸಿಯನ್ನು ಚಿಕ್ಕವಳಿದ್ದಾಗಿಂದ ನೋಡಿಕೊಂಡಿದ್ದವಳಾಗಿದ್ದು, ಆಕೆಯ ಮೂಲಕ ಜೆಸ್ಸಿಯ ನೋವಿನ ಕಥೆ ಅನಿಗೆ ತಿಳಿಯುತ್ತದೆ. ಮುಂದೇನಾಗುತ್ತದೆ ಎಂಬುದನ್ನು ನೀವು ತೆರೆಯ ಮೇಲೆ ನೋಡಿದರೆ ಚೆನ್ನಾಗಿರುತ್ತದೆ.
ನಿರ್ದೇಶಕ ಪ್ರವೀಣ್ ಸುತಾರ ಪ್ರಥಮ ಪ್ರಯತ್ನದಲೇ ವಿಭಿನ್ನ ಕತೆಯೊಂದಿಗೆ ಪ್ರೀತಿ, ನಂಬಿಕೆ ಹಾಗೂ ಬದುಕಿನ ಏರಿಳಿತಗಳನ್ನು ತೆರೆದಿಟ್ಟಿದ್ದಾರೆ. ಚಿತ್ರದ ಮೊದಲಭಾಗ ಇಂಟ್ರಡಕ್ಷನ್ ಹಾಗೂ ಕಾಮಿಡಿಗೇ ಮೀಸಲಾಗಿದ್ದರೂ ದ್ವಿತೀಯ ಭಾಗದಲ್ಲಿ ಹೃದಯ ತಟ್ಟುವ ಕಥೆಯನ್ನು ಹೇಳಿದ್ದಾರೆ. ಕಥೆ,ಚಿತ್ರಕಥೆ, ಬರೆದು ನಾಯಕನಾಗಿ ಅಭಿನಯಿಸಿರುವ ಕಿರುತೆರೆ ಪ್ರತಿಭೆ ಅಶ್ವಿನ್ ತನ್ನ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ. ನಾಯಕಿ ಧನುಶ್ರೀ ಕೂಡ ಅಚ್ಚುಕಟ್ಟಾಗಿ ತನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡುಗಳು ಸದಾ ಗುನುಗುವಂತಿದೆ. ಕರಾವಳಿಯ ಸುಂದರ ತಾಣಗಳನ್ನು ಛಾಯಾಗ್ರಾಹಕ ವಿನೋದ್ ಮಂಡ್ಯ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸಚಿತ್ಫಿಲಂಸ್ ಮೂಲಕ ವೆಂಕಟ್ ಅವರು ಚಿತ್ರವನ್ನು ರಿಲೀಸ್ ಮಾಡಿದ್ದಾರೆ.